ಕೄಷಿ

Monday, November 16, 2009

ಕಾಡಿನ ಹುಚ್ಚು

ಒಮ್ಮೊಮ್ಮೆ ಹಾಗೇ ಅನ್ನಿಸಿದ್ದಿದೆ.
ಹುಚ್ಚು ಸ್ವಲ್ಪ ಹೆಚ್ಚಾಯಿತೇನೋ ಅಂತ!
ಎಲ್ಲರೂ ಕಂಪ್ಯೂಟರ್, ಸಾಫ್ಟವೇರ್ ಅಂತೆಲ್ಲ ಮುಗಿ ಬೀಳ್ತಾ ಇದ್ದ ಕಾಲದಲ್ಲಿ, ಅನಾಯಾಸವಾಗಿ ಸಿಕ್ಕ ಅದೇ ಕೆಲಸವನ್ನು ಬಿಟ್ಟು "ಕಾಡಿಗೆ ಹೋಗ್ತೇನೆ" ಅಂದಾಗ ಕರೆದು ಕುಡ್ರಿಸಿಕೊಂಡು ಬುದ್ಧಿ ಹೇಳಿದ ಗೆಳೆಯರ ನೆನಪು ಇನ್ನೂ ಕಣ್ಣ ಮುಂದಿದೆ.

ಕಾಡು, ವನ್ಯಜೀವಿ ಅದ್ಯಯನ, ಅರಣ್ಯ ಉತ್ಪನ್ನಗಳು, ಪಶ್ಚಿಮ ಘಟ್ಟಗಳು
ಅಂತೆಲ್ಲ ಹೇಳ್ತಾ, ಜಮೀನು ಖರೀದಿಸಿ,
ಕೃಷಿ ಮಾಡ್ತಾ ಇದ್ದು ಬಿಡಬೇಕೆಂದು ಕೊಂಡು,
ಖರೀದಿಸಿದ ಹೊಸ ಜಮೀನಿನಲ್ಲೇ ಒಂದು ಮನೆ ಕಟ್ಟಿಸಿ ಉಳಿಯುತ್ತಿದ್ದ ಹಾಗೆ,
ಇದ್ದಕ್ಕಿದ್ದಂತೆ, ಈಗ ಜರ್ಮನಿಗೆ ಬಂದು ಸೇರಿದ್ದೇನೆ.

ಬರ್ಲಿನ್ ಸಮೀಪದ ಗ್ರೀಪ್ಸ್ ವಾಲ್ಡ್ ವಿಶ್ವವಿದ್ಯಾಲಯದಲ್ಲಿ
ಮತ್ತೆ ಪಕ್ಕಾ ವಿದ್ಯಾರ್ಥಿಯಾಗುತ್ತಿದ್ದೇನೆ.
"ಕಾಡಿನ ಮಧ್ಯನೇ ಹುಟ್ಟಿ ಬೆಳೆದರೂ ಕಾಡಿನ ಹುಚ್ಚು ಯಾಕನೋ?"
ಅಂತ ಆಯಿ ಅಗಾಗ ಕೇಳುವ ಪ್ರಶ್ನೆಗೆ ಉತ್ತರವಂತೂ ನನ್ನಲ್ಲಿ ಇಲ್ಲ.

ಕಾಡು ನನ್ನ ಪಾಲಿನ ಹುಚ್ಚಂತೂ ಹೌದು.
ಅದೇ ಈ ವರೆಗೆ ನೆದರ್ ಲ್ಯಾಂಡ್ಸ್, ನೇಪಾಳ, ಫಿಲಿಪ್ಪನ್ಸ್, ಥೈಲ್ಯಾಂಡ್, ಮತ್ತೆ ಈಗ ಜರ್ಮನಿಗೆ ಕರೆದು ತಂದದ್ದು.

ಕ್ಷಮಿಸಿ ಬರೆಯುತ್ತೇನೆ ಅಂತ ಹೇಳಿದವನಿಗೆ ಈ ಬದಲಾವಣೆ ಕಾರಣದಿಂದ,
ಅಥವಾ ಹಳ್ಳಿಯ ಸೀಮಿತ ಅಂತರ್ಜಾಲ ಸೌಲಭ್ಯದಿಂದ ಬರೆಯಲಾಗಲಿಲ್ಲ
ಅಂತ ಹೇಳಲು ನನ್ನ ಮನಸ್ಸು ಒಪ್ಪುತ್ತಿಲ್ಲ.
ಎಲ್ಲಕ್ಕೂ ಆಲಸ್ಯವೇ ಕಾರಣ ಅಂತ ಪ್ರಾಮಾಣಿಕವಾಗಿ ಒಪ್ಪಿಕೊಳ್ಳಲೇಬೇಕು.
ಈಗಾದರೂ ಕಾರಣ ಹೇಳದೇ ಬರೆಯುವ ಪ್ರಯತ್ನ ಮಾಡಲೇ ಬೇಕು.

Sunday, June 21, 2009

ಸಾರಿ! ಕಾಯಿಸಿದ್ದಕ್ಕೆ!

ಸ್ನೇಹಿತರೇ,
ತುಂಬಾ ದಿನಗಳಿಂದ ಬ್ಲಾಗ ಬರೆಯಲು ಸಾಧ್ಯವಾಗಲಿಲ್ಲ. ಕ್ಷಮಿಸಿ. ಸುತ್ತಾಟ ಸ್ವಲ್ಪ ಹೆಚ್ಚಾಯಿತು. ಖಂಡಿತ ಇನ್ನೊಂದೆರಡು ದಿನಗಳಲ್ಲಿ ಬರೆಯುತ್ತೇನೆ.
ಧನ್ಯವಾದಗಳು,
ಬಾಲು ಸಾಯಿಮನೆ

Monday, March 23, 2009

ಕೊನೆಯ ಪುಟವೋ? ಮೊದಲ ಪುಟವೋ?

ದಾಂಡೇಲಿ ಕಾಡಿನಲ್ಲಿ ಈಗ ಶೋಕಾಚರಣೆ. ಆರು ದಶಕಗಳಿಂದ ಕಾಡಿಗೆ ಸೇವೆ ಸಲ್ಲಿಸಿದವರು ಕರ್ತವ್ಯ ಮುಗಿಸಿ ಹೊರಡುವ ತಯಾರಿಯಲ್ಲಿದ್ದಾರೆ.


ಪ್ರತಿ ವರ್ಷ ಎಲೆ ಉದುರಿಸಿ, ಗೊಬ್ಬರ ಹಾಕಿ, ಬೇರೆ ಯಾರೂ ಬರದ ಹಾಗೆ ಮುಳ್ಳು ಬೇಲಿ ಕಟ್ಟಿ ಕಾಡನ್ನು ಬೆಳೆಸುವ ಪ್ರಯತ್ನ ಮಾಡಿದವರು, ಕಾಡಿಗೆ ವಿದಾಯ ಹೇಳ ಹೊರಟಿದ್ದಾರೆ.

ಎಲ್ಲಿ ಬೆಂಕಿ ಹಾಕಬಹುದೆಂಬ ಅತಂಕ. ......

ಇದೊಳ್ಳೆ ಕಥೆ!

ಕರ್ತ್ಯವ್ಯ ಮುಗಿಸಿ ಹೊರಟರೆ ಯಾರು ಬೆಂಕಿ ಹಾಕುತ್ತಾರೆ ಎಂಬ ಪ್ರಶ್ನೆಯೆ?

ಕರ್ತ್ಯವ್ಯ ಮುಗಿಸಿ ಹೊರಟವರು; ಮನುಷ್ಯರಲ್ಲ; ಸಸ್ಯ. ಹೆಸರು ಬಿದಿರು.
ಆ ವಿದ್ಯಮಾನದ ಹೆಸರು "ಕಟ್ಟೆ".- ಬಿದಿರು ಕಟ್ಟೆ.

ಬಿದಿರಿನ ಕಟ್ಟೆ ಅಂದರೆ ಹೂ ಬಿಡುವುದು.
ಬಿದಿರು ಹೂ ಬಿಡುವುದು ನಲವತ್ತರಿಂದ ಅರವತ್ತು ವರ್ಷಗಳಿಗೊಮ್ಮೆ ಮಾತ್ರ ಎಂದು ಎಲ್ಲರಿಗೂ ಗೊತ್ತಿರಬಹುದು.

ಹೂ ಬಿಟ್ಟು ಬೀಜವಾಗುವ ಈ ಪ್ರಕ್ರಿಯೆ ಬಿದಿರಿನ ಜೀವನದಲ್ಲಿ ಒಮ್ಮೆ ಮಾತ್ರ.

ಅಕ್ಕಿಯ ಹಾಗೆ ಕಾಣುವ ಬಿದಿರ (ಬೀಜ) ಅಕ್ಕಿ ಬೇಯಿಸಿ ಊಟ ಮಾಟಬಹುದು.


'ಜಡ್ಡು ಭತ್ತ'ದ ಹಾಗೆ ಕಾಣುವ ಈ ಅಕ್ಕಿ ರುಚಿ ಮಾತ್ರ ಸ್ವಲ್ಪ ಭಿನ್ನ.

ಬಿದಿರಿನ ಕಟ್ಟೆಗೆ ಬರಗಾಲಕ್ಕೆ ಯಾವಗಲೂ ಸಂಬಧವನ್ನು ಕಲ್ಪಿಸಲಾಗುತ್ತದೆ.

ನನ್ನಜ್ಜ ಮಾತಿನ ಮಧ್ಯ , "ಬಿದಿರು ಕಟ್ಟೆ ವರ್ಷ" ಎಂದು ಅದನ್ನೊಂದು ಮೈಲು ಗಲ್ಲಾಗಿ ಉಪಯೋಗಿಸತ್ತಿದ್ದುದು ನೆನಪಿದೆ. ಬಿದಿರು ಕಟ್ಟೆ ಯನ್ನು ನೋಡಿದ ಜನಕ್ಕೆ ಅದೊಂದು ಮರೆಯಲಾಗದ ವರ್ಷ ಎಂದೆನಿಸುತ್ತದೆ. ಬಿದಿರಿನ ಅಕ್ಕಿ ಊಟ ಮಾಡಿ ಬದುಕಿದ್ದನ್ನು ನೆನಪಿಸುವ ಜನ ಇನ್ನೂ ನಮಗೆ ಅಲ್ಲಲ್ಲಿ ಸಿಗುತ್ತಾರೆ.


ಕರ್ನಾಟಕದಲ್ಲಿ ಬಿದಿರ ಕಟ್ಟೆ ಪ್ರಾರಂಭವಾಗಿ ನಾಲ್ಕೈದು ವರ್ಷಗಳೇ ಆದವು. ಕೆಲವು ವರ್ಷಗಳ ಹಿಂದೆ ಭದ್ರಾ ಅಭಯಾರಣ್ಯದಲ್ಲಿ ಬಿದಿರಿಗೆ ಕಟ್ಟೆ ಬಂದು ಎಲ್ಲ ಒಣಗಿ ನಿಂತಾಗ ಬೆಂಕಿ ಬಿದ್ದಿದ್ದರ ಪರಿಣಾಮವಾಗಿ ಕಾಡೆಲ್ಲ ನಾಶವಾಗಿದ್ದು ನೆನಪಿರಬಹುದು.

ದಾಂಡೇಲಿಯಲ್ಲಿ ಕಳೆದ ವರ್ಷದಿಂದ ಬಿದಿರಿಗೆ ಹೂವು ಬರಲು ಪ್ರಾರಂಭವಾಗಿದೆ. ಕಾಡೆಲ್ಲ ಒಣಗಿ ನಿಂತಿದೆ. ಬೆಂಕಿ ಬಿದ್ದರೆ ಕಾಡೆಲ್ಲ ಉರಿದು ಹೋಗುವಂತಾಗಿದೆ. ಅರಣ್ಯ ಇಲಾಖೆ ಸಹ ಆತಂಕದಿಂದಿದೆ.


ಈಶಾನ್ಯ ರಾಜ್ಯಗಳಲ್ಲಿ ಈಗಷ್ಟೇ ಬಿದಿರು ಕಟ್ಟೆ ಮುಗಿದಿದೆ. ಭಾರೀ ಬರಗಾಲ ಬರಬಹುದೆಂಬ ಜನರ ನಿರೀಕ್ಷೆ ಇನ್ನೂ ಜೀವಂತವಾಗಿದೆ. (ಆರ್ಥಿಕ ಹಿಂಜರಿತಕ್ಕೂ ಇದಕ್ಕೂ ಸಂಭಂಧ ಇರಲಿಕ್ಕಿಲ್ಲ ಬಿಡಿ.)

ಸಾಮಾನ್ಯವಾಗಿ ಬಿದಿರಿನ ಅಕ್ಕಿ ಹೇರಳವಾಗಿ ಸಿಗುವುದರಿಂದ ಇದನ್ನು ತಿಂದು ಇಲಿಗಳ ಸಂಖ್ಯೆ ಹೆಚ್ಚಾಗುತ್ತದೆ. ನಂತರದಲ್ಲಿ ಅಹಾರ ಇಿಲ್ಲದ ಇಇಲಿಗಳು ಸಮೀಪದ ಗದ್ದೆಗಳಿಗೆ ಧಾಳಿ ಇಟ್ಟು ಬೆಳೆ ಹಾನಿ ಮಾಡುತ್ತವೆ. ಅಹಾರ ಿಲ್ಲದ ಿಲಿಗಳು ಸಾವು ಪ್ಲೇಗ ನಂತಹ ರೋಗಕ್ಕೆ ಕಾರಣವಾಗುತ್ತದೆ ಎನ್ನುವುದು ಸಾಮಾನ್ಯವಾಗಿ ಸಿಗುವ ವಿವರಣೆ.


ಅರಣ್ಯ ಇಲಾಖೆಯಂತೂ ಅದಷ್ಟು ಬಾಚಿಕೊಳ್ಳುವ ತಯಾರಿಯಲ್ಲಿದೆ. ಒಣ ಬಿದಿರು ಇದ್ದರೆ ಬೆಂಕಿ ಬಿದ್ದಾಗ ಆರಿಸುವುದು ಸಾಧ್ಯವಿಲ್ಲವೆಂಬ ನೆಪವೊಡ್ಡಿ ನಿರಂತರ ಬಿದಿರು ಕಡಿದು ಸಾಗಿಸುತ್ತಿದೆ.


ಬಿದಿರು ಹಾಗೆ ಒಮ್ಮೆಲೆ ಏಕೆ ಹೂ ಬಿಟ್ಟು ಸತ್ತು ಹೋಗುತ್ತದೆ?

ವೈಜ್ಣಾನಿಕ ಕಾರಣಗಳು ಹಲವಾರು ಅಂತರಜಾಲದಲ್ಲಿ ಸಿಗಬಹುದು.

ಆದರೆ ನನಗನ್ನಿಸುವುದು, ಅದೊಂದು ನಿಸರ್ಗ ಚಕ್ರದ ಬಾಗ ಎಂದು ಮಾತ್ರ. ಒಂದು ಪಾಳು ಬಿದ್ದ ಜಾಗದಲ್ಲಿ ಸಸ್ಯ ಬೆಳೆಯುವಪ್ರಕ್ರಿಯೆಯನ್ನೊಮ್ಮೆ ನೋಡಿ. ಕಳೆ, ಹುಲ್ಲು, ಒಂದೊಷ್ಟು ಪೊದೆ ಜಾತಿಯ ಸಸ್ಯಗಳು, ಹೀಗೆ ಒಂದಾದ ಮೇಲೊಂದರಂತೆ ಸಸ್ಯಗಳು ಬೆಳೆಯುತ್ತವೆ. ಅವು ಅಲ್ಲೇ ಬಿದ್ದು ಕೊಳೆತು ಮಣ್ಣು ಮತ್ತಷ್ಟು ಫಲವತ್ತಾಗಿ, ಆ ಸಸ್ಯಗಳ ನಡುವೆ ಮರಗಳಗುವ ಸಸ್ಯಗಳ ಬೀಜ ಮೊಳಕೆಯೊಡೆಯುತ್ತವೆ.

(ಹಳೆ ಮೈಸೂರು ಬಾಗದಲ್ಲಿ "ನಿನ್ನ ಮನೆ ಎಕ್ಕುಟ್ಟೋಗಾ!" ಎಂದು ಬೈಯ್ಯುವುದು ಕೇಳಿರಬಹುದು. . ಸಾಮಾನ್ಯವಾಗಿ ಹಾಳು ಬಿದ್ದ ಜಾಗದಲ್ಲಿ ಮೊದಲು ಬೆಳೆಯುವ ಸಸ್ಯ ಎಂದರೆ ಎಕ್ಕದ ಜಾತಿಯ ಗಿಡ. ಅಂದರೆ ನಿನ್ನ ಮನೆ ಜಾಗದಲ್ಲಿ ಎಕ್ಕದ ಗಿಡ ಹುಟ್ಟಲಿ ಎಂದು.)

ನಿತ್ಯ ಹರಿದ್ವರ್ಣ ಕಾಡಿನಲ್ಲಿ ಗುರಿಗೆ ಜಾತಿಯ ಸಸ್ಯಗಳು ಬೆಳೆಯುತ್ತವೆ. ಕಾಡಿನ ಅಂಚಿನಲ್ಲಿ ಬೆಳೆಯು ಈ ಸಸ್ಯಗಳು, ಸಾಮಾನ್ಯವಾಗಿ ನಾಲ್ಕು ವರ್ಷಕ್ಕೊಮ್ಮೆ ಹೂ ಬಿಢುತ್ತವೆ. ಮಳೆ ಹೆಚ್ಚು ಬೀಳುವ ಈ ಭಾಗದಲ್ಲಿ ನಾಲ್ಕು ವರ್ಷ ಕಾಡನ್ನು ರಕ್ಷಣೆ ಮಾಡಿ, ತರಗೆಲೆ ಹಾಕಿ, ಫಲವತ್ತತೆ ಹೆಚ್ಚಿಸಿದರೆ, ಉಳಿದ ಮರಗಳಾಗುವ ಸಸ್ಯಗಳ ಬೇಜ ಇವುಗಳ ಸಂಧಿಯಲ್ಲಿ ಮೊಳಕೆಯೊಡೆದು, ಬೆಳೆಯುತ್ತದೆ. ಹಾಗೆ ಆ ಮರಗಳು ಬೆಳೆಯಲು ತೊಡಗಿದಾಗ 'ಗುರಿಗೆ' ಅಲ್ಲಿಂದ ಮರೆಯಾಗುತ್ತದೆ. ತನ್ನ ಕರ್ತವ್ಯ ಮುಗಿಯಿತೆಂದು ಪಕ್ಕದ ಹುಲ್ಲುಗಾವಲಿನಲ್ಲಿತ್ತ ಸಾಗುತ್ತದೆ.

ಅರೆ ನಿತ್ಯ ಹರಿದ್ವರ್ಣ ಮತ್ತು ತೇವಾಂಶ ಭರಿತ ಕಾಡಿನಲ್ಲಿ ಇದೇ ಜಾತಿಯ ಇನ್ನೊದು ಗುರಿಗೆ ಇದೆ. ಅದು ಹೂ ಬಿಡುವುದ ಎಂಟು ವರ್ಷಕ್ಕೊಮ್ಮೆ. ಮಳೆ ಕಡಿಮೆ ಬೀಳುವ ಕಾಡಿನಲ್ಲಿ ಮಣ್ಣು ಫಲವತ್ತಾಗಲೂ ಸಮಯಬೇಕಲ್ಲವೇ?


ಹನ್ನೆರಡು ವರ್ಷಕ್ಕೊಮ್ಮೆ ಹೂ ಬಿಡುವ "ಕುರುಂಜಿ"ಯ ಬಗ್ಗೆ ಕೇಳಿರಬಹುದು. ಅದೂ ಸಹ ಈ ಗುಂಪಿನ ಸಸ್ಯವೇ. ಮುನ್ನಾರ್ ನಂತಹ ತೀರ ಇಳಿಜಾರಿನ ಹುಲ್ಲು ಗಾವಲಿನಲ್ಲಿ ಬೆಳೆಯುವ ಸಸ್ಯ.



ಬಿದಿರು ಬೆಳೆಯುವುದು ಎಲೆ ಉದುರಿಸುವ ಕಾಡಿನಲ್ಲಿ. ಅಲ್ಲಿ ಸಾಮಾನ್ಯವಾಗಿ ಬೀಳುವ ಮಳೆ 2000 ಮೀ.ಮೀ ಗಿಂತ ಕಡಿಮೆ. ಕಡಿಮೆ ನೀರನ್ನು ಉಪಯೋಗಿಸಿಕೊಂಡು ಬೂಮಿಯನ್ನು ಫಲವತ್ತ ಮಾಡುವ ಜವಾಬ್ದಾರಿ ಅವಕ್ಕೆ. ಹಾಗಾಗಿ 45 ರಿಂದ 60 ವರ್ಷದವೆರೆಗೆ ಹೂ ಬಿಡುವ ಬಿದಿರುಗಳಿವೆ.

ಎಲೆ ಉದುರಿಸಿ, ತಮ್ಮ ಮುಳ್ಳುಗಳಿಂದ ಬೇಲಿ ಮಾಡಿ ಮೊಳಕೆಯೊಡೆಯುತ್ತಿರುವ ಇತರ ಸಸ್ಯಗಳ ಚಿಗುರುಗಳನ್ನು ಸಂರಕ್ಷಿಸುತ್ತಿದ್ದವು, ತನ್ನ ಕರ್ತ್ವವ್ಯ ಮುಗಿಯಿತೆಂದು ಹೊರಟರೆ, ಮನುಷ್ಯ ಗೀಚುವ ಒಂದು ಬೆಂಕಿ ಕಡ್ಡಿ ಅಷ್ಟೆಲ್ಲ ವರ್ಷದ ಪ್ರಯತ್ನ ವ್ಯರ್ಥಮಾಡಿಬಿಡುತ್ತವೆ.

ಛಲಬಿಡದ ನಿಸರ್ಗ ಮತ್ತೆ ಬಿದಿರನ್ನೇ ಬೆಳೆಸಲು ಪ್ರಾರಂಭಿಸುತ್ತದೆ.




Tuesday, March 17, 2009

ಹೆಜ್ಜೆ ಅಳಿಸಿ ಹೋಗುವ ಮುನ್ನ.........

ಆ ಮಣ್ಣು ರಸ್ತೆಯಲ್ಲಿ ಜೀಪು ಸಾಕಷ್ಟು ವೇಗವಾಗಿಯೇ ಹೋಗುತ್ತಿತ್ತು. ಪಕ್ಕದಲ್ಲಿದ್ದ ಸ್ನೇಹಿತ ಸಂಜಯ್ ಗುಬ್ಬಿ ಹೇಳದೇ ಇದ್ದರೆ ಹತ್ತು ವರ್ಷಗಳಿಂದ ಹುಡುಕುತ್ತಾ ಇದ್ದ ಚಿತ್ರವೊಂದು ತಪ್ಪಿಹೋಗುತ್ತಿತ್ತು. ಥಟ್ಟನೆ ನಿಲ್ಲಿಸಿ ಫೋಟೊ ಹೊಡೆದಿದ್ದ್ದೆ ಹೊಡೆದದ್ದು. ಖುಷಿ ಎಷ್ಟಾಗಿತ್ತೆಂದರೆ, ಮೆಮರಿ ಕಾರ್‍ಡ್ ಖಾಲಿ ಆಗುವ ಹಂತಕ್ಕೆ ಬಂದಿತ್ತು.


ಅಷ್ಟೆಲ್ಲ ಆಸಕ್ತಿಯಿಂದ ಹೊಡೆದ ಫೋಟೊ ಯಾವುದೂ ಅಲ್ಲ. ಒಂದು ಹುಲಿ ಹೆಜ್ಜೆಯದು.

 
ಯಾಕಪ್ಪಾ ಅಷ್ಟೆಲ್ಲ; ನಾಗರಹೊಳೆಗೋ, ಬಂಡೀಪುರಕ್ಕೋ ಹೋಗಿದ್ರೆ ಸುಲಭವಾಗಿ ಸಿಗುತ್ತಿತ್ತು ಅನ್ನಬಹುದು. ಆದರೆ, ಈ ಹೆಜ್ಜೆ ಸಿಕ್ಕಿದ್ದು ದಾಂಡೇಲಿಯಲ್ಲಿ. ಹಾಗಾಗಿ ಅಷ್ಟೆಲ್ಲ ಖುಷಿ ಪಟ್ಟಿದ್ದು.
ನಾನು ದಾಂಡೇಲಿಯ ಕಾಡಿನಲ್ಲಿ ಅಡ್ಡಾಡಲು ಶುರು ಮಾಡಿದ್ದು ಹತ್ತು ವರ್ಷಗಳ ಹಿಂದೆ; ನಗರದ ನೌಕರಿ ಬೇಡ, ಕಾಡು ಸುತ್ತುತ್ತ ಕಾಡಿನೂರಿನಲ್ಲೇ ಬದುಕಬೇಕು ಎಂದು ತಿರುಗಿ ಊರಿಗೆ ಬಂದಾಗಿನಿಂದ ಈ ಕಾಡಿನಲ್ಲಿ ಸುತ್ತಾಡುತ್ತಿದ್ದೇನೆ. ಕಾಡಿನಲ್ಲಿ ಹುಲಿ ಇದೆ ಎನ್ನುವ ಸಾಕ್ಷಿಯಾಗಿ ಆಗಾಗ "ಹಿಕ್ಕೆಗಳು" ಸಿಕ್ಕಿದ್ದವು. ಎಷ್ಟೋ ಬಾರಿ ಇಡೀ ದಿನ ಅಲೆದರೂ ಹುಲಿ ಏಕೆ, ಯಾವ ಕಾಡು ಪ್ರಾಣಿಯ ಕುರುಹೂ ಸಿಗದೇ ಇದ್ದದ್ದೂ ಇದೆ. ಎಲ್ಲೊ ಬೆರಳೆಣಿಕೆಯಷ್ಟು ಬಾರಿ ಮಾತ್ರ ಹೆಜ್ಜೆ ಸಿಕ್ಕಿದ್ದು. ಅದಕ್ಕೆ ಈ ಖುಷಿ.

ದಾಂಡೇಲಿ ಮೊದಲಿನಿಂದಲೂ ಹುಲಿ ಇದ್ದ ಪ್ರದೇಶವೇ! ಬ್ರಿಟಿಷ್ ದಾಖಲೆ ಪ್ರಕಾರ ೧೮೫೬ರಿಂದ ೧೮೬೬ರವರೆಗೆ ೧೫೮ ಹುಲಿಗಳನ್ನೂ, ೧೮೬೭ರಿಂದ ೧೮೭೭ರವೆಗೆ ೩೫೨ ಹುಲಿಗಳನ್ನು, ೧೯೭೮ರಿಂದ ೧೮೮೨ರವರೆಗೆ ೧೩೦ ಹುಲಿಗಳನ್ನ, ಅಂದಿನ ಬ್ರಿಟಿಶ್ ಸರಕಾರ ಅಧಿಕೃತವಾಗಿ ಈ ಭಾಗದಲ್ಲಿ ಕೊಲ್ಲಿಸಿದೆ. ಅಂದರೆ ೨೭ ವರ್ಷದಲ್ಲಿ ೬೪೦ ಹುಲಿಗಳನ್ನು ಕೊಲ್ಲಿಸಲಾಗಿದೆ. ಅದೂ ಬಹುಮಾನ, ಹಣ ಕೊಟ್ಟು.

ಈಗ ಇಡೀ ದೇಶದ ಕಾಡಿನಲ್ಲಿರುವ ಹುಲಿಗಳ ಸಂಖ್ಯೆ ೧೪೧೧!. ಕರ್ನಾಟಕದಲ್ಲಿ ೨೯೦!

ಬರೀ ಒಂದು ಶತಾಮಾನದಲ್ಲಿ ಎಷ್ಟೆಲ್ಲ ವರ್ಷಗಳಿಂದ ಬದುಕಿದ್ದ ವನ್ಯ ಜೀವಿಗಳೇಕೆ ವಿನಾಶದಂಚಿಗೆ ಸರಿದವು?

ಕಾಳಿ ಕಣಿವೆ ಅರಣ್ಯಾವಲಂಬಿ ಯೋಜನೆಗಳಿಗೆಲ್ಲ ಪ್ರಯೋಗ ಶಾಲೆ. ಕಳೆದ ಒಂದು ಶತಮಾನದಲ್ಲಿ ಈ ಕಣಿವೆಯಲ್ಲಿ ನಿಸರ್ಗದ ಮೇಲೆ ಪ್ರಯೋಗಗಳು ನಿರಂತರವಾಗಿ ನಡೆದಿದ್ದರ ಫಲ ಇದು.


ಮೊದಲು ಬ್ರಿಟೀಶರ ಕಣ್ಣೀಗೆ ಬಿದ್ದದ್ದು ಬಿದ್ದದ್ದು ಹೇರಳಾವಾಗಿ ಇದ್ದ ಸಾಗವಾನಿ ಮರಗಳು. ಕಾಳಿ, ಕಾನೇರಿ ಕಣಿವೆಗಳಲ್ಲಿ ಮರ ಕಡಿದು, ಆ ಕಣಿವೆಯ ಇಳಿಜಾರಿನಲ್ಲೇ ಕೆಳಗೆ ಇಳಿಸಿ, ನದಿ ನೀರಿನಲ್ಲೇ ತೇಲಿಸಿ ಬಿಡುತ್ತಿದ್ದರಂತೆ. ಕಾಳಿ ನದಿಯಲ್ಲಿ ತೇಲುವ ಮರದ ದಿಮ್ಮಿಗಳನ್ನು ಕಾರವಾರದಲ್ಲಿ ಹಿಡಿದು ವಿದೇಶಗಳಿಗೆ (ಕ್ಷಮಿಸಿ, ತಮ್ಮ ದೇಶಗಳಿಗೆ) ಕಳುಹಿಸಲಾಗುತ್ತಂತೆ. ಹಳ್ಳೀಯ ಜನ ಈಗಲೂ ಸಾಗವಾನಿ "ಸಿಲೇಪಾರಿ"ಗೆ ಹೋಗುತ್ತಿತ್ತು ಎಂದು ನೆನಪಿಸಿಕೊಳ್ಳುತ್ತಾರೆ. ಆ "ಸಿಲೇಪಾರು" ಅಂದರೆ ರೇಲ್ವೇ ಸ್ಲೀಪರುಗಳು ಎಂದು ಬೇರೆ ಹೇಳಬೇಕಾಗಿಲ್ಲ ತಾನೆ!.


೧೯೧೯ರಲ್ಲಿ ಸಾ ಮಿಲ್ಲ್ ಒಂದು ಪ್ರಾರಂಭವಾಗುದರೊಂದಿಗೆ ದಾಂಡೆಲಿ ನಗರ ಪ್ರಾರಂಭವಾಯಿತು. ೧೯೪೪ರಲ್ಲಿ ಪ್ಲೈ ವುಡ್ ಕಂಪನಿ, ೧೯೫೫ರಲ್ಲಿ ಪೇಪರ್ ಮಿಲ್ಲ್, ಫ಼ೆರ್ರೊ ಅಲಾಯ್ಸ್ ಕಂಪನಿ, ೬೭ರಲ್ಲಿ ಚಿಪ್ ಬೊರ್‍ಡ್ ಕಂಪನಿ ಹೀಗೆ ಅರಣ್ಯಾಧಾರಿತ ಕೈಗಾರಿಕೆಗಳ ನಗರವಾಗಿ ದಾಂಡೇಲಿ ಬೆಳೆಯಿತು. ಈ ಕಂಪನಿಗಳಿಗೆ ಕಚ್ಛಾ ಮಾಲನ್ನು ಪೂರೈಸಲು ಗಣಿಗಾರಿಕೆಯೂ ಪ್ರಾರಂಬವಾಯಿತು. ೧೯೯೮ರ ಸುಮಾರಿಗೆ ಸುಮಾರು ೮೭ ಕಡೆಗಳಲ್ಲಿ ಅಧಿಕೃತವಾಗಿ ಗಣಿಗಾರಿಕೆಯನ್ನು ನಡೆಸಲಾಗುತ್ತಿತ್ತು. ಈ ಕೈಗಾರಿಕೆಗಳೀಗಾಗಿ ದೇಶದೆಲ್ಲೆಡೆಯಿಂದ ನೌಕರರು ಬಂದು, ದಾಂಡೇಲಿ ಒಂದು ಲಕ್ಷಕ್ಕೂ ಹೆಚ್ಚು ಜನ ಸಂಖ್ಯೆ ಇರುವ ನಗರವಾಯಿತು.


ನಂತರ ಪ್ರಾರಂಭವಾದದ್ದು ವಿದ್ಯುತ್ ಉತ್ಪಾದನೆ. ಕಾಳಿ ಕಣಿವೆ ಏಳು ಬೃಹತ್ ಆಣೆಕಟ್ಟುಗಳು. ಸಾಲದ್ದಕ್ಕೆ ಕೈಗಾ ಬೇರೆ.
ಇವೆಲ್ಲವುಗಳ ನಡುವೆ ಹೇಗೆ ಉಳಿದಾವು ವನ್ಯಜೀವಿಗಳು?
ನಿರಾಸೆಗೊಳ್ಳಬೇಕಾದ್ದಿಲ್ಲ. .......
ಕಾಲ ಬದಲಾಗಿದೆ. .........

ಬರೀ ಕಾಡನ್ನು ಕಡಿದು ಅಭಿವೃದ್ದಿ ಸಾಧ್ಯವಿಲ್ಲ ಎನ್ನಲು ಉದಾಹರಣೆಯಾಗಿ ದಾಂಡೇಲಿಯ ಅರಣ್ಯಾಧಾರಿತ ಎಲ್ಲ ಕೈಗಾರಿಕೆಗಳು ಮುಚ್ಚಿವೆ. ಇದ್ದ ಒಂದೇ ಪೇಪರ್ ಮಿಲ್ಲ್, ಕೃಷಿ ಆಧಾರಿತ ಮರಗಳನ್ನು ನೆಚ್ಚಿಕೊಂಡಿದೆ.
ದಾಂಡೇಲಿ ನಗರದ ಜನಸಂಖ್ಯೆ ೪೮ ಸಾವಿರಕ್ಕೆ ಇಳಿದಿದೆ!

ಕಾಡನ್ನು ಕಡಿದೇ ಬದುಕ ಬೇಕು ಎನ್ನುವ ಜನರ ಸಂಖ್ಯೆ ಕಡಿಮೆ ಆಗಿ, ಕಾಡು ಆಧಾರಿತ ಪ್ರವಾಸೋದ್ಯಮ ಬೆಳೆಯುತ್ತಿದೆ.

ಸರಕ್ಷಣೆಯ ಪ್ರಯತ್ನಕ್ಕೆ ಬೆಂಬಲ ಸಿಗುತ್ತಿದೆ. ಈ ಪ್ರದೇಶ ಹುಲಿ ಸಂರಕ್ಷಿತ ಪ್ರದೇಶ ಎಂದು ಅಧಿಕೃತವಾಗಿ ಘೋಷಣೆಯಾಗಿದೆ. ಅಲ್ಲಲ್ಲಿ ವನ್ಯ ಜೀವಿಗಳ ಕುರುಹುಗಳು ಹೆಚ್ಚೆಚ್ಚು ಸಿಗತೊಡಗಿದೆ.
ಹುಲಿಗಳು ಇನ್ನೂ ನಮ್ಮ ಕಾಡಿನಲ್ಲಿ ಓಡಾಡಿಕೊಂಡಿವೆ ಎನ್ನುವ ಖುಷಿ ಎಂದೂ ಇರುತ್ತದೆ ಎನ್ನುವ ಭರವಸೆ ಮೂಡಿದೆ!.
.........ಉಳೀಸಬೇಕಾದ ಪ್ರಯತ್ನದ ಜವಾಬ್ದಾರಿಯೂ ಹೆಚ್ಚಿದೆ.



Monday, March 16, 2009




ಕರ್ವಾಲೋ ಕಾದಂಬರಿಯ ಹೀರೋ ಮೊನ್ನೆ ಭೇಟಿಯಾದಾಗ!

ಮೊನ್ನೆ ಕಂಡ ಆನೆ


ಇಂಥ ದೊಡ್ಡ ದಂತದ ಆನೆ ದಾಂಡೇಲಿಯಂತೂ ಅಪರೂಪವಾಗುತ್ತಿದೆ. ಮೊನ್ನೆ ಸಿಕ್ಕ ಅಪರೂಪದ ದರ್ಶನ.

Sunday, March 15, 2009


ಕಾಡು ಸಂಪಿಗೆ ಹಣ್ಣು. ಚಿತ್ರ: ಬಾಲಚಂದ್ರ ಸಾಯಿಮನೆ

ಶರಾವತಿ ಕಣಿವೆಗೆ ಆನೆಗಳ ವಿದಾಯ


ಮೊನ್ನೆ ಪತ್ರಿಕೆಯಲ್ಲಿ ಓದಿದ ಸುದ್ದಿ ಮತ್ತೆ ಮತ್ತೆ ಕಾಡುತ್ತಿದೆ. ಶರಾವತಿ ಕಣಿವೆಯಲ್ಲಿ ಬದುಕುತ್ತಿದ್ದ ಆನೆ ಸತ್ತು ಹೋಗಿದೆಯಂತೆ. ಆ ಮೂಲಕ ಮುಂದಿನ ತಲೆಮಾರಿನ ಪಾಲಿಗೆ ಶರಾವತಿ ಕಣಿವೆಯಲ್ಲಿ ಆನೆಗಳಿಲ್ಲದ ಕಾಡು. ಸಾವಿರಾರು ವರುಶಗಳಿಂದ ಬಾಳಿಕೊಂಡಿದ್ದ ಜೀವಿಯೊಂದು ಅಲ್ಲಿ ಬಾಳಲಾರದೆ ಕೊನೆಯುಸಿರೆಳೆದಿದೆ.
ಜಲ ವಿದ್ಯುತ ಯೋಜನೆಗಳು, ಆ ಕಣಿವೆಯ ಕಾಡನ್ನು ನುಂಗಿದ ಮೇಲೆ ಅಳಿದುಳಿದ ಪಕ್ಕದ ಕಾಡಿನಲ್ಲಿ
ಬಾಳಿಕೊಂಡಿದ್ದ ಆನೆ ಮೊನ್ನೆ ಮಹಿಮೆಯ ಸಮೀಪದ ಕಾಡಿನಲ್ಲಿ ಸತ್ತು ಬಿದ್ದದ್ದು ಕಂಡುಬಂದಿದೆ.
ಮೈಸೂರು ಪ್ರಾಂತದಿಂದ ಈ ಭಾಗಕ್ಕೆ ವಲಸೆ ಬರುತ್ತಿದ್ದವು ಎಂದು ಶತಮಾನಗಳ ಹಿಂದಿನ ಧಾಖಲೆ ಹೇಳುತ್ತದೆ. ಹಾಗೆ ಬಂದವಕ್ಕೆ ಹಿಂದೆ ಹೋಗಲಾರದಂತೆ ಮಧ್ಯದ ಕಾಡು ನಾಶವಾಗಿ ಇಲ್ಲೇ ಉಳಿಯಬೇಕಾಯಿತು. ನಂತರದ ಅಭಿವೃದ್ದಿ ಯೋಜನೆಗಳು ಈ ಪ್ರದೇಶವನ್ನೂ ಛಿಧ್ರಗೊಳಿಸಿದವು.

ಉತ್ತರ ಕನ್ನಡದಲ್ಲಿ ಈಗ ಆನೆಗಳಿರುವುದು ದಾಂಡೇಲಿಯ ಸುತ್ತ ಮುತ್ತ ಮಾತ್ರ. ಸಂಖ್ಯೆ ಕೇವಲ ಅರ್ಧ ಶತಕದ ಆಜೂ ಬಾಜು. ಅವೂ ಅಲ್ಲಿ ಬಾಳಲಾರದೇ ಅರ್ಧ ಮಹಾರಾಷ್ಟ್ರಕ್ಕೆ, ಉಳಿದರ್ಧ ಯಲ್ಲಾಪುರ, ಮುಂಡಗೋಡದ ಮಾರ್ಗದಲ್ಲಿ ಹಾವೇರಿ ಜಿಲ್ಲೆ ಹೋಗುತ್ತಿವೆ. ಸರಕಾರಿ ದಾಖಲೆಗಳಲ್ಲಿ ಶೇ ೮೦ ಪ್ರತಿಶತ ಕಾಡು ಇರುವ ಉತ್ತರ ಕನ್ನಡ ಜಿಲ್ಲೆ ಇಷ್ಟು ಆನೆಗಳೂ ಭಾರವಾದವೇ.

ನಿಸರ್ಗ ಮತ್ತು ಮನುಷ್ಯನ ಹೋರಾಟದಲ್ಲಿ ನಿಸರ್ಗ ಈ ಕ್ಷಣಕ್ಕೆ ಸೋತಂತೆ ಅನ್ನಿಸಿದರೂ, ಸೋತವರು ನಾವೇ ಎಂದು ತಿಳಿಯಲು ಕಾಲ ಬೇಕು.

Friday, March 6, 2009

ನಾನೂ ಬ್ಲಾಗ್ ಬರೆಯಲು ಶುರು ಮಾಡಿದೆ !

ಕೃಷಿ ಉದ್ಯೋಗ. ಕಾಡು ಹವ್ಯಾಸ. ವಾಸ ಮಲೆನಾಡಿನ ಮೂಲೆಯ ಒಂದು ಹಳ್ಳಿ. ಇದೊಂದು ಹೊಸ ಪ್ರಯೋಗ.
ಬ್ಲಾಗ್ ಬರೆಯಲು ಶುರು ಮಾಡುವಾಗ ಶಾಲೆಗೆ ಹೋಗುವ ನೆನಪಾಗುತ್ತಿದೆ . ಕಾಡು ಸಂಪಿಗೆ ಹಣ್ಣು, ಮುಳ್ಳು ಹಣ್ಣು ನಡುವೆ ಅ ಆ ಬರೆದ ಹಾಗೆ.